Monday, November 14, 2016

ಚಿಕ್ಕಪ್ಪನವರ ಒಂದು ನೆನಪು

ನಮ್ಮ ತಾಯಿಯವರ ತಂಗಿ ಸೌಭಾಗ್ಯ ಚಿಕ್ಕಮ್ಮನವರ ಯಜಮಾನರಾದ, ನಮ್ಮೆಲ್ಲರ ಪ್ರೀತಿಯ ಶ್ರೀ ಆರ್. ತಿಮ್ಮಯ್ಯನವರ ಸ್ಮರಣಾರ್ಥ ಬರೆದ ನನ್ನ ಮತ್ತು ನನ್ನ ಪತ್ನಿಯ ಲೇಖನಗಳು.


ಹೀಗೇ ಚಿಕ್ಕಪ್ಪನವರ ಬಗ್ಗೆ ಒಂದು ನೆನಪು


ಬೆಳಿಗ್ಗೆ ಸವಿನಿದ್ದೆಯಲ್ಲಿದ್ದಾಗಲೇ ಏನೋ ಪಟ ಪಟ ಸದ್ದಾಯಿತು. ನಿಧಾನವಾಗಿ ಕಣ್ಣು ತೆರೆದು ನೋಡಿದರೆ, ನಾನು ಮಲಗಿದ್ದ ಜಾಗದಲ್ಲಿ ಮಾತ್ರ ಹಾಸಿಗೆ ಇದ್ದು, ಸುತ್ತಲೂ ಇದ್ದ ಹಾಸಿಗೆಗಳನ್ನು ತೆಗೆದು ಹಾಕಲಾಗಿತ್ತು. ಇನ್ನೂ ಮಂಜು ಮಂಜಾಗಿದ್ದ ಕಣ್ಣುಗಳನ್ನು ಉಜ್ಜಿಕೊಂಡು ಶಬ್ದ ಬಂದ ಕಡೆ ನೋಡಿದರೆ, ಬಿಳಿ ಪಂಚೆ, ತುಂಬು ತೋಳಿನ ಬಿಳಿ ಬನಿಯನ್ ತೊಟ್ಟ ಅಕಾರವೊಂದು, ಒಂದು ಸಣ್ಣ ಕೋಲಿಗೆ ಬಟ್ಟೆ ಕಟ್ಟಿಕೊಂಡು ಕಿಟಕಿ ಮೇಲಿದ್ದ ಧೂಳನ್ನು ಜಾಡಿಸುತ್ತಿತ್ತು. ಹಾಗೇ ಸಂಪೂರ್ಣ ಎಚ್ಚರವಾಗಿ ನಾನಿದ್ದ ಜಾಗದ ಅಂದಾಜು ಮಾಡುತ್ತ ಹಾಸಿಗೆ ಮೇಲೆ ಎದ್ದು ಕುಳಿತೆ. ನನಗಾಗ ಅರಿವಾಗಿದ್ದು ಹಿಂದಿನ ದಿನ ನಾನು ನಮ್ಮ ಚಿಕ್ಕಪ್ಪನವರ ಮಲೆಬೆನ್ನೂರಿನ ಮನೆಗೆ, ನನ್ನ ಸೋದರ ಮಾವನಾದ ನನ್ನದೇ ವಯಸ್ಸಿನ ಸತೀಶನೊಂದಿಗೆ ಬಂದಿದ್ದು ಮತ್ತು ರಾತ್ರಿ ಒಳ್ಳೆ ಊಟ ಮಾಡಿ ಸುಸ್ತಾಗಿ ಮಲಗಿದ್ದು, ಮತ್ತು ಇದು ನಮಗೆ ಆ ಮನೆಯಲ್ಲಿ ಮೊದಲಿನ ಬೆಳಿಗ್ಗೆ ಆಗಿತ್ತು. ನನಗಾಗ ಸುಮಾರು ಹತ್ತು ವರ್ಷ ವಯಸ್ಸಿರಬಹುದು. ಹಾಸಿಗೆ ಮೇಲೆ ಕುಳಿತು ಮತ್ತೊಮ್ಮೆ ಕಣ್ಣುಜ್ಜಿಕೊಂಡು ನೋಡಿದೆ. ಆ ಮನೆಯ ಯಜಮಾನರೇ ಅಗಿದ್ದರೂ, ಯಾವುದೇ ಸಂಕೋಚವಿಲ್ಲದೇ ಮನೆ ಕೆಲಸ ಮಾಡುತ್ತಿದ್ದರು. ನನ್ನ ಹಾಸಿಗೆ ಸುತ್ತ ಇದ್ದ ಎಲ್ಲಾ ಹಾಸಿಗೆಗಳನ್ನೂ ಅವರೇ ತೆಗೆದಿದ್ದರು.

ನಮ್ಮ ಚಿಕ್ಕಪ್ಪ ತಿಮ್ಮಯ್ಯನವರು ಹಾಗೇ. ಎಲ್ಲಾ ಕೆಲಸಗಳನ್ನೂ ಅವರೇ ಮಾಡಿಕೊಳ್ಳುತ್ತಿದ್ದರು. ಯಾವಾಗಲೂ ಶುಭ್ರ ವಸ್ತ್ರಧಾರಿ. ಮಲೆಬೆನ್ನೂರಿನ ಮನೆಯಲ್ಲಿ ಸ್ನಾನದ ನೀರಿನ ಹಂಡೆಗೆ ಅವರೇ ಕಟ್ಟಿಗೆ ಇಟ್ಟು ಉರಿ ಹಾಕಬೇಕು. ಹಾಗೆ ನೀರೊಲೆಗೆ ಉರಿ ಹಾಕುವಾಗಲೂ ಸುತ್ತ ಮುತ್ತ ಎಲ್ಲೂ ಕಸ ಇರಬಾರದು. ಧಗ ಧಗ ಉರಿಯುವ ಬೆಂಕಿಯೂ ನಮ್ಮ ಚಿಕ್ಕಪ್ಪನವರನ್ನು ಕಂಡರೆ ಶಿಸ್ತಾಗಿ, ಒಲೆಯೊಳಗೇ ಉರಿಯಿತ್ತಿತ್ತು. ಹೊರಗೆ ಎಲ್ಲೂ ಜ್ವಾಲೆ ಸೂಸದೇ, ಹಂಡೆಯ ಹೊರಗೆ ಕಪ್ಪು ಮಸಿ ಬಳಿಯದೇ ಬೆಂಕಿ ಉರಿಯಬೇಕು. ಅಂತಹ ಶಿಸ್ತನ್ನು ನಮ್ಮ ಚಿಕ್ಕಪ್ಪ ಅದಕ್ಕೆ ಕಲಿಸಿದ್ದರು. ಅಂದರೆ, ನೀವು ಅವರು ಮಾಡುವ ಯಾವುದೇ ಕೆಲಸದ ಅಂದಾಜು ಮಾಡಿಕೊಳ್ಳಬೇಕು. ಕೆಲಸಗಳಲ್ಲಿ ಶೇಕಡ ನೂರರಷ್ಟು ತಾದ್ಯಾತ್ಮತೆ. ಮನೆಯ ಎಲ್ಲಾ ಕಿಟಕಿ ಬಾಗಿಲುಗಳೂ ನಮ್ಮ ಚಿಕ್ಕಪ್ಪ ಪ್ರತಿದಿನ ಬಂದು ಮಾತನಾಡಿಸದಿದ್ದರೆ (ಧೂಳು ಒರೆಸದಿದ್ದರೆ) ಬೇಸರ ಮಾಡಿಕೊಳ್ಳುತ್ತಿದ್ದವೇನೋ. ತಮ್ಮ ಎಲ್ಲಾ ಬಟ್ಟೆಗಳನ್ನೂ ತಾವೇ ಶುಭ್ರ ಮಾಡಿಕೊಳ್ಳುತ್ತಿದ್ದರು. ಅವರ ಬಿಳಿ ಬಟ್ಟೆ ಯಾವುದೇ ಜಾಹೀರಾತಿನಲ್ಲಿನ ಬಿಳಿ ಬಟ್ಟೆಗಳನ್ನೂ ಮೀರಿಸುತ್ತಿತ್ತು. ಹಾಗೇ ಪ್ರತಿದಿನವೂ ಮುಖ ಕ್ಷೌರ ಮಾಡಿಕೊಂಡು ಮೀಸೆ ಮತ್ತು ಗಡ್ಡ ಎಂದೂ ನುಣುಪಾಗಿ ಇರುವಂತೆ ನೋಡಿಕೊಳ್ಳಬೇಕು. ಅವರೆಂದಿಗೂ ಕುರುಚಲು ಗಡ್ಡ ಬಿಟ್ಟಿದ್ದನ್ನು ನೋಡೇ ಇಲ್ಲ. ಬಹುಶಃ ಇದಕ್ಕೆ ನಮ್ಮ ಚಿಕ್ಕಮ್ಮನೂ ಕಾರಣ ಇರಬೇಕು!!... ಅವರ ದಿನ ನಿತ್ಯಚರಿ ಶುರುವಾಗುತ್ತಿದ್ದುದೇ ಮನೆ ಕೆಲಸದೊಂದಿಗೆ. ಮುಗಿಯುತ್ತಿದ್ದುದೂ ಮನೆಕೆಲಸದೊಂದಿಗೆ. ಎಲ್ಲದರಲ್ಲೂ ಅದೇ ತಾದ್ಯಾತ್ಮತೆ. ಮನೆಯಲ್ಲಿ ಮಕ್ಕಳಿಗೂ ಇದೇ ಶಿಸ್ತನ್ನು ಕಲಿಸಿದ್ದರು. ಮಕ್ಕಳೆಲ್ಲಾ ಬೆಳಿಗ್ಗೆ ಎದ್ದ ತಕ್ಷಣ ಅವರವರಿಗೆ ಹಂಚಿಕೊಂಡಿದ್ದ ಕೆಲಸ ಅವರವರೇ ಮಾಡಿಕೊಳ್ಳುವ ಅಭ್ಯಾಸ ಬೆಳಿಸಿದ್ದರು . ಮನೆಯಲ್ಲೂ ಎಂದೂ ದನಿಯೆತ್ತಿ ಮಕ್ಕಳನ್ನು ಗದರಿದ್ದು ನೋಡಲಿಲ್ಲ.

ನಮ್ಮ ತಂದೆ ನಾಗಪ್ಪನವರು ಭೋರ್ಗರೆವ ಜಲಪಾತವಾದರೆ, ಚಿಕ್ಕಪ್ಪ ತಿಮ್ಮಯ್ಯನವರು ಪ್ರಶಾಂತವಾಗಿ ಹರಿವ ನದಿ. ಇಬ್ಬರೂ ಶಿಸ್ತಿನ ಸಿಪಾಯಿಗಳೇ. ಇಬ್ಬರೂ ತಮ್ಮ ನೇರ ನುಡಿ, ಸರಳತೆಯನ್ನು ಬಿಟ್ಟುಕೊಡಲಿಲ್ಲ, ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಇಬ್ಬರೂ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಮಾಡಿಸಿದರು. ನಮ್ಮ ತಂದೆಯ ರೌದ್ರಾವತಾರ ನೋಡಿ ಅಭ್ಯಾಸವಿದ್ದ ನನಗೆ, ನಮ್ಮ ಚಿಕ್ಕಪ್ಪನವರ ಶಾಂತತೆ ನೋಡಿ ಆಶ್ಚರ್ಯವೂ ಅಗುತ್ತಿತ್ತು. ನಮ್ಮ ತಂದೆ ಜೋಕನ್ನು ಸಹ ಜೋರಾಗಿ ಮಾಡಿದರೆ, ಚಿಕ್ಕಪ್ಪನವರು ಮೀಸೆಯಿಲ್ಲದ ತುಟಿಗಳಲ್ಲೇ ತುಳುಕಿಸಿ ಮಂದಹಾಸ ಬೀರುತ್ತ ನಗೆಬಾಂಬನ್ನು ಸಿಡಿಸುತ್ತಿದ್ದರು. ಇವರಿಬ್ಬರನ್ನೂ ನೋಡಿದಾಗ, ಜೀವನದ ಅಂತರಂಗಗಳೆಲ್ಲವೂ ಒಮ್ಮೆ ನಿಗೂಢವಾಗಿಯೂ ಮತ್ತೊಮ್ಮೆ ಅತ್ಯಂತ ಸರಳವಾಗಿಯೂ ಕಾಣಿಸುತ್ತಿತ್ತು.

ಆಂತರಿಕ ಶಿಸ್ತು ಎನ್ನುವುದು ಅಂತರ್ಗತವಾಗಿಸಿಕೊಂಡಿದ್ದ ಚಿಕ್ಕಪ್ಪನರು, ಊಟದಲ್ಲೂ ಅದೇ ಶಿಸ್ತನ್ನು ಅಳವಡಿಸಿಕೊಂಡಿದ್ದರು. ಕೆಲಸಕ್ಕೆ ಹೋಗುವಾಗ ಬೆಳಿಗ್ಗೆ ಮುದ್ದೆ ಸಾರು ಉಂಡು ಹೋಗುತ್ತಿದ್ದರು. ಅವರು ಬೆಳಗಿನ ತಿಂಡಿ ತಿಂದ್ದದ್ದು ನಾನಂತೂ ನೋಡಲಿಲ್ಲ. ನಮ್ಮ ಚಿಕ್ಕಮ್ಮನಿಗೆ ಹುಶಾರಿಲ್ಲದಿದ್ದಾಗ, ಸ್ವಲ್ಪವೂ ಬೇಸರವಿಲ್ಲದೇ, ಪೂರ್ಣ ತೊಡಗಿಸಿಕೊಂಡು ಅವರ ಸೇವೆಯನ್ನು ಮಾಡಿದರು. ನನ್ನ ಪತ್ನಿ ಕೆಲವೊಮ್ಮೆ ನನ್ನ ಬಳಿ “ಹೆಂಡತಿಯ ಸೇವೆ ಮಾಡುವ ಅವರ ಗುಣ ಬೇರಾವ ಗಂಡಸಿಗೂ ಬರುವುದು ಸುಲಭವಲ್ಲ” ಎಂದು ಹೇಳುತ್ತಿದ್ದರೆ, ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದೆ.

ಚಿಕ್ಕಪ್ಪನವರು ಕೊನೆ ಕಾಲದಲ್ಲೂ ತಮ್ಮ ಸಹಜ ಪ್ರವೃತ್ತಿಯಾದ ತಿಳಿಹಾಸ್ಯ ಬಿಟ್ಟಿರಲಿಲ್ಲ. ತಮಗೆ ಅಪಾರ ನೋವು ಇದ್ದರೂ ನೋಡಬಂದವರ ಮುಖದಲ್ಲಿ ನಗು ಬರಿಸುವ ಗುಣ. ಅವರು ತೀರಿಕೊಂಡದ್ದನ್ನು ನಂಬಲೇ ಸಾಧ್ಯವಿಲ್ಲದಷ್ಟು ಅವರು ಕಣ್ಣಿಗೆ, ಹೃದಯಕ್ಕೆ ತುಂಬಿಕೊಂಡಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆ ನಡೆದ ದಿನ ಎಲ್ಲಾ ಮುಗಿದ ಮೇಲೆ ಅವರ ಮನೆಗೆ ಬಂದಾಗ ಅವರು ಮಲಗುತ್ತಿದ್ದ ಮಂಚದ ಮೇಲೆ ಸೊಳ್ಳೆ ಪರದೆ ಹಾಕಲು ಇದ್ದ ಮರದ ಚೌಕಟ್ಟಿನ ಮೇಲೆ ಒಂದು ಹೊಸ ಬಿಳಿ ಚಡ್ದಿ ಹಾಕಿದ್ದು ನೋಡಿದೆ. ಚಿಕ್ಕಪ್ಪನ ಮಗ ನಾಗೇಶ (ನಟರಾಜ್) “ಇದು ನೋಡಿ ಶ್ರೀಧರಣ್ಣ, ಇದನ್ನು ನಮ್ಮ ಅಪ್ಪ, ಆಸ್ಪತ್ರೆಗೆ ಹೋಗುವ ಮುಂಚೆ ತಾವೇ ತೊಳೆದು ಇಟ್ಟಿದ್ದು. ಇದನ್ನು ಹೊಸತು ಎಂದುಕೊಳ್ಳಬೇಡಿ. ಅವರು ಹಾಗೇನೆ.” ಎಂದ. ಕಣ್ಣು ತುಂಬಿ ಬಂತು. ತಮ್ಮ ಒಳಚಡ್ಡಿಯನ್ನೂ ಶುಭ್ರವಾಗಿ ಇಟ್ಟಿರುತ್ತಿದ್ದ, ಚಿಕ್ಕಪ್ಪ, ಜೀವನದಲ್ಲೂ ಶುಭ್ರವಾಗೇ ಬಾಳಿ ಎಲ್ಲರಿಗೂ ತಮ್ಮ ಆದರ್ಶವನ್ನು ಬಾಳಿ ತೋರಿಸುವುದರ ಮೂಲಕ ಜೀವನ ಸಂದೇಶ ನೀಡಿ ಬಂದ ದಾರಿಗೆ ಹೋಗಿಬಿಟ್ಟರು. ಅವರ ನೆನಪಷ್ಟೆ ಈಗ ಉಳಿದಿರುವುದು.
                                                
                                                   ಡಾ. ಎಸ್.ಎನ್. ಶ್ರೀಧರ
                                (ಶ್ರೀ ಆರ್. ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಮಗ)



ನಮ್ಮ ಚಿಕ್ಕ ಮಾವ ಹೀಗಿದ್ದರು

ನಮ್ಮಣ್ಣ ಜಯಣ್ಣನೊಂದಿಗೆ ನಮ್ಮ ಚಿಕ್ಕ ಮಾವನವರಾದ ಶ್ರೀ ಆರ್. ತಿಮ್ಮಯ್ಯನವರ ಮನೆಗೆ ಅಳುಕಿನಿಂದಲೇ ಅವರ ಮೈಸೂರಿನ ಮನೆಗೆ ಕಾಲಿಟ್ಟಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ  ದೂರಶಿಕ್ಷಣದ ನನ್ನ ಎಮ್.. ಕೋರ್ಸ್ ಗಾಗಿ ನಡೆವ ಸಂಪರ್ಕ ತರಗತಿಗಳಿಗೆ ಹಾಜರಾಗಲು ಮೈಸೂರಿನಲ್ಲಿರುವ ಅವರ ಮನೆಯಲ್ಲಿ ಉಳಿದುಕೊಳ್ಳಲು ಜಯಣ್ಣ ನನ್ನನ್ನು ಅವರ ಮನೆಗೆ ಕರೆದುಕೊಂಡು ಬಂದು ಬಿಟ್ಟಿದ್ದರು.
ಅಲ್ಲಿವರೆಗೂ ಅಷ್ಟೇನೂ ಹತ್ತಿರದಿಂದ ಅವರನ್ನು ಕಂಡಿರದಿದ್ದರೂ, ನಾನು ಅವರ ಮನೆಗೆ ಕಾಲಿಟ್ಟ ದಿನವೇ ತಮ್ಮ ಸರಳತೆಯ ಮಾತುಗಳಿಂದ ಚಿಕ್ಕ ಮಾವನವರೂ, ಅವರ ಧರ್ಮಪತ್ನಿ ಶ್ರೀಮತಿ ಸೌಭಾಗ್ಯಕ್ಕ, ಅವರ ಮಕ್ಕಳಾದ ಮಾಲಿನಿ, ನಾಗೇಶ ಮತ್ತು ಶಾಲಿನಿ ಅವರ ಸೌಜನ್ಯ ಪೂರಿತ ಸ್ನೇಹಮಯಿ ವರ್ತನೆಯಿಂದ ನನಗೆ ಈ ಮನೆ ಹೊಸತೆಂದು ಅನ್ನಿಸಲೇ ಇಲ್ಲ. ಅವರು ಆಗಿನ್ನೂ ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಹೊಸ ಮನೆ ಕಟ್ಟಿಸುತ್ತಿದ್ದರು. ಹೊಸ ಮನೆ ಕಟ್ಟುವಾಗ ಸಮಾನ್ಯವಾಗಿ ಎಲ್ಲರ ಮನದಲ್ಲಿ ಅತೀವ ಒತ್ತಡವಿರುವುದು ಸಹಜ. ನಮ್ಮ ಚಿಕ್ಕಮಾವ ಅದನ್ನೆಲ್ಲಾ ಒಳಗೊಳಗೆ ಅನುಭವಿಸುತ್ತಿದ್ದರೂ, ಅವರು ಎಂದೂ ಅದನ್ನು ತಮ್ಮ ಪತ್ನಿಯವರ ಮೇಲಾಗಲೀ, ಅಥವಾ ಮಕ್ಕಳ ಮೇಲಾಗಲೀ ತೋರಕೊಡದೇ, ತಾವೇ ಅದರ ಹಣಕಾಸಿನ ನಿರ್ವಹಣೆ ಮಾಡುತ್ತಿದ್ದರು. ಅವರು ಎಂದಿಗೂ ಯಾರ ಮೇಲೂ ಸಿಡುಕಿದ್ದಾಗಲೀ, ರೇಗಿದ್ದಾಗಲೀ ಅಥವಾ ಅಸಮಾಧಾನದಿಂದ ಮಾತನ್ನಾಡಿದ್ದನ್ನಾಗಲೀ ನಾನು ಕಂಡಿದ್ದಿಲ್ಲ. ಮನೆಯಲ್ಲಿ ಮಕ್ಕಳು ಮತ್ತು ಚಿಕ್ಕಮಾವನವರು ಶಾಲಾಕಾಲೇಜುಗಳಿಗೆ ಹೊರಟ ಮೇಲೆ, ನಮ್ಮ ಚಿಕ್ಕ ಅತ್ತೆ ಸೌಭಾಗ್ಯಕ್ಕ ತಾವೂ ತಮಗೆ ಮಧ್ಯಾಹ್ನದ ಊಟ ಮತ್ತು ಒಂದು ಛತ್ರಿ ಹಿಡಿದು ಅವರು ಕಟ್ಟಿಸುತ್ತಿದ್ದ ಹೊಸಮನೆ ಬಳಿಗೆ ಹೊರಟುಬಿಡುತ್ತಿದ್ದರು. ಅವರು ಮತ್ತೆ ಮನೆಗೆ ಬರುತ್ತಿದ್ದುದು ಸಂಜೆಯ ಹೊತ್ತಿಗೇನೆ. ಮನೆಯಲ್ಲಿ ಎಲ್ಲರೂ ಅವರವರ ಜವಾಬ್ದಾರಿ ಅರಿತು ತಮ್ಮ ತಮ್ಮ ಕೆಲಸ ಮಾಡಿಕೊಳ್ಳುವ ಅಭ್ಯಾಸ ಬೆಳೆಸಿಕೊಂಡಿದ್ದರು
.
ನಮ್ಮ ಚಿಕ್ಕಮಾವ ಯಾವಾಗಲೂ ಶುಭ್ರವಸ್ತ್ರಧಾರಿಯಾಗಿರುತ್ತಿದ್ದರು. ಮನೆಯಲ್ಲಿದ್ದಾಗ, ಬಿಳಿ ಪಂಚೆ ಮತ್ತು ತೋಳಿನ ಬನಿಯನ್ ತೊಟ್ಟಿದ್ದರೆ, ಹೊರಗೆ ಹೋಗುವಾಗ, ಸರಳವಾದ ಪ್ಯಾಂಟು-ಷರಟು ಧರಿಸುತ್ತಿದ್ದರು. ಅವರು ಸದಾ ಚಟುವಟಿಕೆಯ ಚಿಲುಮೆಯಾಗಿರುತ್ತಿದ್ದರು ಮತ್ತು ಶಿಸ್ತು ಮತ್ತು ಶುಚಿತ್ವಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ನಾನು ಅವರಲ್ಲಿ ಕಂಡ ಈ ಗುಣಗಳನ್ನು ಅವರ ಕೊನೆ ಕ್ಷಣಗಳಲ್ಲೂ ಹಾಗೇ ಉಳಿಸಿಕೊಂಡಿದ್ದರು. ಕೊನೆಕ್ಷಣಗಳಲ್ಲಿ ಕೂಡಾ ವಿನೋದದ ಮಾತನ್ನಾಡಿ ತಮ್ಮನ್ನು ನೋಡಬಂದವರಲ್ಲೂ ಮಂದಹಾಸ ಮೂಡುವಂತೆ ಮಾಡುತ್ತಿದ್ದರು.

ಅವರ ಮಂದಹಾಸದ ಮುಖ, ಸರಳತೆಯ ಜೀವನ ನನ್ನ ಕಣ್ಣಿಗೆ ಕಟ್ಟಿದಂತಿದ್ದು, ಈ ಚಿತ್ರಣ ಎಂದಿಗೂ ಮಾಸದಂತೆ, ನಮ್ಮೆಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಸಿಕೊಂಡು ನಾವ್ಯಾರೂ ಉಹಿಸಿರದಷ್ಟು ಬೇಗ ನಮ್ಮನ್ನೆಲ್ಲಾ ಅಗಲಿ ಭೌತಿಕವಾಗಿ ಮರೆಯಾಗಿಬಿಟ್ಟರು.
  
                                                        ಶ್ರೀಮತಿ ರತ್ನಶ್ರೀಧರ್
                                (ಶ್ರೀ ಆರ್. ತಿಮ್ಮಯ್ಯನವರ ಧರ್ಮಪತ್ನಿಯ ಅಕ್ಕನ ಸೊಸೆ)


ಕರ್ನಾಟಕದಲ್ಲೇ ಅನಾಥವಾಗುತ್ತಿರುವ ಕನ್ನಡ

ನವೆಂಬರ್ 7 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಇಲ್ಲಿ ಕೊಟ್ಟಿರುವುದು ಪೂರ್ಣ ಪಾಠ. ಇದರಲ್ಲಿ ಅಲ್ಪ ಬದಲಾವಣೆಯೊಂದಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಯಿತು.


ಕರ್ನಾಟಕದಲ್ಲೇ ಅನಾಥವಾಗುತ್ತಿರುವ ಕನ್ನಡ

ಪ್ರಜಾವಾಣಿಯು ಕನ್ನಡ ರಾಜ್ಯೋತ್ಸವದ ದಿನದಂದು, ಕನ್ನಡದ ಬಗ್ಗೆ ಅನೇಕ ವಿಷಯಗಳನ್ನು ಚೊಕ್ಕದಾಗಿ ನೀಡಿದೆ. ಹಾಗೇ “ಕನ್ನಡದ ಕೆಲಸ: ಅನುಷ್ಠಾನ ಮುಖ್ಯ” ಎಂಬ ಶಿರೋನಾಮೆಯೊಂದಿಗೆ ಖ್ಯಾತ ವಿಮರ್ಶಕರಾದ ಸಿ.ಎನ್. ರಾಮಚಂದ್ರನ್ ಅವರ ಅನಿಸಿಕೆಗಳನ್ನು ಪ್ರಕಟಿಸಿದೆ. ಈ ಲೇಖನಕ್ಕೆ ಪೂರಕವಾಗಿ ಹಾಗೂ ಭಿನ್ನವಾಗಿ ಚರ್ಚಿಸಲು ಈ ಲೇಖನವನ್ನು ಸಿದ್ಧಪಡಿಸಿ, ಓದುಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹೀಗೊಂದು ಪ್ರಸಂಗ: ಮನೆಯೊಂದರಲ್ಲಿ ಹಿರಿಯರೊಬ್ಬರ ನಿಧನದ ನಂತರ ಅವರ ಸ್ಮರಣಾರ್ಥ ಒಂದು ಸಂಚಿಕೆಯನ್ನು ಹೊರತರಲು ಮಕ್ಕಳು ಮೊಮ್ಮಕ್ಕಳು ನಿರ್ಧರಿಸಿದರು. ಲೇಖನವನ್ನು ಕೂಢ್ರೀಕರಿಸಿದಾಗ ಮಕ್ಕಳು ಕನ್ನಡದಲ್ಲಿ ನೆನಪುಗಳನ್ನು ಆತ್ಮೀಯತೆಯ ಸವಿ ಹಂಚುವಂತೆ ಬರೆದರೆ, ಪ್ರೀತಿಯ ಮೊಮ್ಮಕ್ಕಳು ಅಜ್ಜನ ಮೇಲಿನ ಪ್ರೇಮವನ್ನು ಇಂಗ್ಲೀಷಿನಲ್ಲಿ ಅದ್ಭುತವಾಗಿ ನಿವೇದಿಸಿದ್ದರು. ಮಕ್ಕಳು, ಮೊಮ್ಮಕ್ಕಳು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಅಜ್ಜನ ಜೊತೆಗೂ ಅವರ ಬದುಕಿನಲ್ಲಿ ಮುದ್ದಾದ ಕನ್ನಡದಲ್ಲೇ ಮಾತನಾಡಿದ್ದಾರೆ. ಆದರೆ, ಶಿಕ್ಷಣ ಕೊಟ್ಟ ಬಳುವಳಿಯಿಂದ ಕನ್ನಡದಲ್ಲಿ ಬರೆಯಲಾರರು! ಬಹುಶಃ ಅವರ ಮುಂದಿನ ಪೀಳಿಗೆ ಕನ್ನಡ ಲಿಪಿಯನ್ನೇ ಓದಲಾರರು ಎನಿಸಿತ್ತಿದೆ. ಇದರಲ್ಲಿ ಅತಿಶಯೋಕ್ತಿಯೇನಿಲ್ಲ. ನಮ್ಮ ಸ್ನೇಹಿತ ಬಂಧುಗಳೊಡನೆ ಪ್ರವಾಸಕ್ಕೆ ಹೋಗಿದ್ದಾಗ ಅವರ ಮಕ್ಕಳು ಕನ್ನಡ ಬೋರ್ಡ್ ಓದಲು ಬಾರದೇ ಅವರ ಅಪ್ಪ-ಅಮ್ಮ ಅವರನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ನಾನು ಕನಲಿಹೋದ ದಿನಗಳಲ್ಲಿ ಇದೂ ಒಂದು. ಇತ್ತೀಚೆಗೆ, ನಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ಸುಗಮ ಸಂಗೀತ ಸ್ಪರ್ಧೆ ಏರ್ಪಡಿಸಿದ್ದೆವು. ಅನೇಕ ಮಕ್ಕಳು ಕನ್ನಡ ಗೀತೆಗಳನ್ನು ಇಂಗ್ಲೀಷ್ ಲಿಪಿಯಯಲ್ಲಿ ಬರೆದುಕೊಂಡು ಅದರಲ್ಲಿ ಓದಿ ಬಾಯಿಪಾಠ ಮಾಡುತ್ತಿದ್ದರು. ಆ ಮಕ್ಕಳೆಲ್ಲರೂ ಕನ್ನಡಿಗರೇ, ಕನ್ನಡ ಮಾತನಾಡಬಲ್ಲರು, ಆದರೆ ಕನ್ನಡ ಲಿಪಿಯನ್ನು ಬಳಸಲಾರರು. ದುರಂತವೆಂದರೆ, ಅವರ ಪೋಷಕರಿಗೆ ತಮ್ಮ ಮಕ್ಕಳ ಈ ಸ್ಥಿತಿ ಸಹಜ ಎಂಬಂತೆ ಅನ್ನಿಸಿದ್ದು. ಕೆಲವರಂತೂ, ತಮ್ಮ ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂಬುದೇ ಮಹಾಸಾಧನೆ ಎಂಬಂತೆ ತೋರಿಸಿಕೊಳ್ಳುತ್ತಿದ್ದರು. ನಾವು ರಾಜ್ಯದ ಹೊರಗೆ ಪ್ರವಾಸ ಹೋದಾಗ ಯಾರಾದರೂ ಕನ್ನಡಿಗರು ಸಿಗುತ್ತಾರೇನೋ ಎಂದು ಹುಡುಕುತ್ತಿದ್ದಾಗ, ಕನ್ನಡ ಮಾತನಾಡದ ಕನ್ನಡಿಗರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಮ್ಮ ರಾಜ್ಯದಲ್ಲಿ ಕೂಡ, ಸ್ವತಃ ಕನ್ನಡಿಗರಿಗಿಂತೆ ಅನ್ಯ ಭಾಷಿಕರೇ ಚಂದದ ಕನ್ನಡ ಮಾತನ್ನಾಡುವುದನ್ನು ಕಂಡಿದ್ದೇವೆ. ಕೆಲವು ನಟಿಮಣಿಯರಂತೂ, ಬೇಕೆಂತಲೇ ತಪ್ಪು ತಪ್ಪು ಕನ್ನಡ ಮಾತನ್ನಾಡುತ್ತಾ, ತಮ್ಮ ಇಂಗ್ಲೀಷಿಗೆ ಪರ್ಯಾಯ ಪದಗಳು ಕನ್ನಡದಲ್ಲಿ ಇಲ್ಲವೆಂಬಂತೆ ಹಾವಭಾವ ತೋರ್ಪಡಿಸುತ್ತಾರೆ. ಅವರ ಇಂಗ್ಲೀಷ್ ಭಾಷೆಯೂ ಅಷ್ಟೇ ಕೆಟ್ಟದಾಗಿರುತ್ತದೆಯೆಂಬುದು ತಿಳಿದ ವಿಷಯವೇ.
ಕನ್ನಡ ರಾಜ್ಯೋತ್ಸವ ಮತ್ತೆ ಬಂದಿದೆ. ಎಲ್ಲರಿಗೂ ಮತ್ತೆ ಮತ್ತೆ ಹ್ಯಾಪಿ ರಾಜ್ಯೋತ್ಸವ ಹೇಳುವ ಅವಕಾಶ. ಆದರೆ, ಕನ್ನಡದ ಈಗಿನ ಸ್ಥಿತಿ ಹೇಗಿದೆ. ನಮ್ಮ ಮಕ್ಕಳೇ ಕನ್ನಡ ಲಿಪಿ ಓದಲಾರದ “ಅವಿದ್ಯಾವಂತ”ರಾಗುತ್ತಿದ್ದಾರೆ. ಎಲ್ಲರಿಗೂ ಇಂಗ್ಲೀಷ್ ಬೇಕು, ನಿಜ. ಕನ್ನಡ ಮಾಧ್ಯಮದಲ್ಲಿ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು ಕೆಲವು ಸಾಹಿತಿಗಳಂತೆ ನಾನು ಹೇಳಹೊರಟಿಲ್ಲ. ಅದು ಈಗಿನ ಪರಿಸ್ಥಿತಿಯಲ್ಲಿ ಕಾರ್ಯಸಾಧುವಲ್ಲ ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಸುಪ್ರೀಂ ಕೋರ್ಟು “ಭಾಷಮಾಧ್ಯಮ ಪೋಷಕರ ಆಯ್ಕೆ” ಎಂದು ಆಜ್ಞೆ ಹೊರಡಿಸಿರುವುದರಿಂದ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ಮಾತೃಭಾಷೆಯಲ್ಲಿ ಪ್ರಾರ್ಥಮಿಕ ಶಿಕ್ಷಣ ಕೊಡಿಸಲು, ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿ, ಪ್ರಧಾನ ಮಂತ್ರಿಗಳಿಗೆ ಎರಡು ಪತ್ರ ಬರೆದಿದ್ದಾಗಿ ತಿಳಿಸಿದ್ದಾರೆ (ಪ್ರ.ವಾ. ನ.2). ಇದು ಕೇವಲ ಹಾವು ಹೊಡೆಯಲು ಪೊದೆ ಸುತ್ತ ಕೋಲಿನಲ್ಲಿ ಬಡಿದಂತಾಗುತ್ತದೆ. ಏಕೆಂದರೆ, ಮೇಲ್ಮನೆಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇಲ್ಲದೇ, ಇತರೆ ವಿರೋಧ ಪಕ್ಷಗಳ ಸದಸ್ಯರ ಸಹಕಾರವಿಲ್ಲದೇ ಯಾವುದೇ ಕಾನೂನನ್ನು ರೂಪಿಸಲಾಗುವಿದಿಲ್ಲ. ಅಲ್ಲದೇ, ಬಹುತೇಕ ರಾಜಕಾರಣಿಗಳ ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲೇ ಓದುತ್ತಿರುತ್ತಾರೆ. ಹಾಗಾಗಿ ಮೇಲೆ ಹೇಳಿದ ಸಂವಿಧಾನ ತಿದ್ದುಪಡಿಗೆ ಅವರ ಬೆಂಬಲ ಸಿಗುವುದು ಕಷ್ಟ.
ಈಗಿನ ಪರಿಸ್ಥಿತಿಯಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಇಂಗ್ಲೀಷ್ ಶಾಲೆಗಳಿಗೆ ಬೇಡಿಕೆ ಹೆಚ್ಚಿ, ಅತ್ಯಂತ ಚೆನ್ನಾಗಿ ನಡೆಯುತ್ತಿರುವ ಸರ್ಕಾರಿ ಶಾಲೆಗಳೂ ಹಾಳು ಬೀಳುವಂತಾಗಿವೆ. ನಗರದ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲೆಯಬಹುದಾದರೆ, ಅದಕ್ಕಾಗೇ ಅವರಿಗೆ ಉನ್ನತ ಶಿಕ್ಷಣದಲ್ಲಿ, ಹಾಗೂ ಮುಂದೆ ಉದ್ಯೋಗಗಳಲ್ಲಿ ಉತ್ತಮ ಅವಕಾಶ ದೊರೆಯಬಹುದಾದರೆ, ಹಳ್ಳಿ ಮಕ್ಕಳಿಗೆ ಯಾಕೆ ಬೇಡ? ಇತ್ತೀಚೆಗೆ ಸರ್ಕಾರೀ ಕನ್ನಡ ಮಾಧ್ಯಮ ಶಾಲೆಗಳಲ್ಲೂ, ಒಂದನೇ ತರಗತಿಯಿಂದಲೂ ಇಂಗ್ಲೀಷ್ ಕಲಿಸುತ್ತಿದ್ದಾರೆ. ಆದರೆ, ಅದರ ಗುಣಮಟ್ಟ ಚರ್ಚಾರ್ಹ ವಿಷಯ. ಈಗಿರುವ ಪರಿಸ್ಥಿತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಲು ಕಷ್ಟಸಾಧ್ಯವಾಗಿರುವಾಗ, ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಗುಣಮಟ್ಟದ ಕನ್ನಡ ಕಲಿಸುವ ಪ್ರಯತ್ನ ಬೇಕಾಗಿದೆ.  
ಸಂವಿಧಾನ ತಿದ್ದುಪಡಿಗಿಂತ, ಮನೆ ಮನೆಗಳಲ್ಲಿ ಪೋಷಕರ ಮೂಲಕ ಮಕ್ಕಳಿಗೆ ಕನ್ನಡ ಕಲಿಸಬೇಕಾಗಿದೆ. ಸಾಧ್ಯವಾದರೆ ಶಾಲೆಗಳಲ್ಲಿ ಭಾಷೆಗಳ ಆಯ್ಕೆ ಬಂದಾಗ ಕನ್ನಡವನ್ನೇ ಪ್ರಥಮ ಭಾಷೆಯಾಗಿ ಆಯ್ದುಕೊಳ್ಳಲು ಪೋಷಕರು ಮುತುವರ್ಜಿ ವಹಿಸಬೇಕಾಗಿದೆ. ಕನ್ನಡಕ್ಕೆ ಬದಲಾಗಿ ಸಂಸ್ಕೃತವನ್ನು ಮೊದಲ ಭಾಷೆಯಾಗಿ ಆರಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪೋಷಕರು ಹಂಬಲಿಸುವುದು, ಅದರ ಪಠ್ಯ ಕಡಿಮೆ ಇದ್ದು, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಸುಲಭವಾಗಿ ಪಡೆಯಬಹುದು ಎಂಬುದೇ ಆಗಿದೆ. ಕನ್ನಡ ಉಪಾಧ್ಯಾಯರುಗಳು ಕೂಡ ಎಷ್ಟೇ ಬರೆದರೂ ಕಡಿಮೆ ಅಂಕ ಕೊಡುತ್ತಾರೆ ಎಂಬುದು ಸಾರ್ವಜನಿಕ ಅಭಿಪ್ರಾಯ. ಆದರೆ, ಅದು ಇತ್ತೀಚೆಗೆ ಹಾಗಿಲ್ಲ ಎಂದು ನನ್ನ ಅನುಭವ. ಕನ್ನಡ ಪ್ರಥಮ ವಿಷಯವಾಗಿ ಓದಿದ ಅನೇಕ ಮಕ್ಕಳು 10 ನೇ ತರಗತಿಯಲ್ಲಿ ನಿಗದಿಯಾಗಿರುವ 125 ಅಂಕಗಳಿಗೆ, 124-125 ಅಂಕಗಳನ್ನು ಪಡೆದಿರುವುದನ್ನು ನಾವು ಕಾಣಬಹುದು. ಇಷ್ಟಿದ್ದರೂ, ಬಹುತೇಕ ಕನ್ನಡ ಉಪಾಧ್ಯಾಯರುಗಳೂ, ಉಪನ್ಯಾಸಕರೂ ತಮ್ಮ ಮಕ್ಕಳಿಗೆ ಪ್ರೌಢಶಾಲೆಯಲ್ಲಿ ಕನ್ನಡದ ಬದಲಿಗೆ ಸಂಸ್ಕೃತವನ್ನೇ ಪ್ರಥಮ ಭಾಷೆಯಾಗಿ ಕೊಡಿಸಿರುವುದರ ನಿದರ್ಶನಗಳು ಸಾಮಾನ್ಯ.  ಇದು ನಾನು ಸಂಪನ್ಮೂಲ ವ್ಯಕ್ತಿಯಾಗಿ, ಪಿ.ಯು.ಸಿ. ಕನ್ನಡ ಉಪನ್ಯಾಸಕರುಗಳಿಗೆ ಕೌಶಲ್ಯ ಕಾರ್ಯಾಗಾರ ನಡೆಸಿಕೊಟ್ಟಾಗ ಕಂಡುಕೊಂಡ ಕಟು ಸತ್ಯ. ನಾನು ಸ್ವತಃ ಕನ್ನಡ ಉಪನ್ಯಾಸಕನಲ್ಲವೆಂದೂ, ಮತ್ತು ತಾಂತ್ರಿಕ ಕಾಲೇಜೊಂದರಲ್ಲಿ ಪ್ರಾಂಶುಪಾಲನಾಗಿ ನಿರ್ವಹಿಸುತ್ತಿದ್ದೇನೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದೇನೆ. 
ಸಂಸ್ಕೃತದ  ಬಳಕೆ ಮನೆಮಾತನಲ್ಲಿ ಇಲ್ಲವಾದ್ದರಿಂದ ಅದನ್ನು ಪ್ರಥಮ ಭಾಷೆಯಾಗಿ ಶಾಲೆಗಳಲ್ಲಿ ಕಲಿಸಲು ಪ್ರಸ್ತುತವಲ್ಲ ಎಂದು ನನ್ನ ಅಭಿಮತ. ಸಂಸ್ಕೃತ ವಿಧ್ವಾಂಸರು, ಸಂಸ್ಕೃತವಿಲ್ಲದೇ ಕನ್ನಡವಿಲ್ಲ ಎಂದು ಸಾಧಿಸಿ ತೋರಬಹುದು. ಇನ್ನೂ ಹೆಚ್ಚಿನ ಮಟ್ಟಿಗೆ ಸಂಸ್ಕೃತವನ್ನು ಕಲಿಯುವ ಅಗತ್ಯವನ್ನು ಪ್ರತಿಪಾದಿಸಬಹುದು. ಸಂಸ್ಕೃತದ ಹಿರಿಮೆ ಮತ್ತು ಕಲಿಕೆ ಬಗ್ಗೆ ನನ್ನಲ್ಲಿ ಯಾವುದೇ ಪೂರ್ವಾಗ್ರಹವಿಲ್ಲ. ಆದರೆ, ಮನೆಮಾತಾದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯಲು ಅದು ಅಡ್ಡ ಬರಬಾರದು ಎಂಬುದೇ ನನ್ನ ಪ್ರತಿಪಾದನೆ.
ಮನೆಯಲ್ಲಿನ ಕಲಿಕೆ ಶಾಲೆಯ ಕಲಿಕೆಯಷ್ಟೇ ಪರಿಣಾಮಕಾರಿಯಾಗಿರುವುದರಿಂದ, ಮನೆಯಲ್ಲಿ ಮಕ್ಕಳಿಗೆ ಕನ್ನಡ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕಾಗಿದೆ. ಪೋಷಕರು ಮನೆಯಲ್ಲಿ ಕನ್ನಡ ದಿನಪತ್ರಿಕೆಗೆ ಚಂದಾದಾರರಾಗಿ, ಪ್ರತಿನಿತ್ಯ ತಮ್ಮ ಮನೆಗೆ ಕನ್ನಡ ಪತ್ರಿಕೆಯನ್ನು ತರಿಸಿ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಬೇಕಾಗಿದೆ. ಇದೇನು ಹೆಚ್ಚಿನ ಖರ್ಚಿನ ಬಾಬತ್ತಲ್ಲ. ದಿನ ಪತ್ರಿಕೆ ಬೆಲೆ ದಿನಕ್ಕೆ ಕೇವಲ 3 ಅಥವಾ 4 ರೂ ಆಗಬಹುದು. ಮಕ್ಕಳಿಗೆ ಬಣ್ಣದ ಚಿತ್ರ ಇರುವ ಚಂದಮಾಮನಂತಹ ಕಥೆ ಪುಸ್ತಕಗಳ ಪರಿಚಯ ಮಾಡಿಕೊಡಿ. ಇತ್ತೀಚೆಗೆ, ಪುರಾಣ, ರಾಮಾಯಣ, ಮಹಾಭಾರತ, ಪಂಚತಂತ್ರ ಕಥೆಗಳು, ಹನಿಗವನಗಳು, ರಾಷ್ಟ್ರಪ್ರೇಮಿ ಕಥೆಗಳು, ಭಾರತದ ಮಹಾಸಾಧಕರು, ಹೀಗೆ ಅನೇಕ ವಿಷಯಗಳನ್ನು ಹೊತ್ತ ಸಣ್ಣ ಸಣ್ಣ ಕನ್ನಡ ಪುಸ್ತಕಗಳು, ಬಣ್ಣ, ಬಣ್ಣದ ಚಿತ್ರಗಳೊಂದಿಗೆ ಪುಸ್ತಕದ ಅಂಗಡಿಗಳಲ್ಲಿ ಲಭ್ಯವಿವೆ.  ಇಂತಹ ಪುಸ್ತಕಗಳ ಬೆಲೆ ರೂ. 10 ರಿಂದ 20 ರ ಆಸುಪಾಸಿನಲ್ಲಿ ಇರುತ್ತದೆ. ಇವನ್ನು ಮಕ್ಕಳಿಗೆ ವಿಶೇಷ ಸಂಧರ್ಭಗಳಲ್ಲಿ, ಉಡುಗೊರೆಯಾಗಿ ನೀಡಬಹುದು. ಖಂಡಿತ, ಈ ಪುಸ್ತಕಗಳು ಮಕ್ಕಳ ಮನಸ್ಸನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ. ಹಾಗೆಯೇ, ಆಗಾಗ ಕನ್ನಡದಲ್ಲಿ ಸಣ್ಣ ಕಥೆಗಳನ್ನು, ತಮ್ಮ ಪ್ರವಾಸದ ಅನುಭವಗಳನ್ನು ಬರೆಯಲು ಮಕ್ಕಳಿಗೆ ಪ್ರೋತ್ಸಾಹಿಸಿ. ಮುಖ್ಯವಾಗಿ ತಾವು ದೊಡ್ಡವರು ಮಕ್ಕಳೊಂದಿಗೆ ಕನ್ನಡದಲ್ಲೇ ಮಾತನಾಡಿ. ಮಕ್ಕಳಿಗೆ ಕನ್ನಡದ ಸೊಗಡು ಹಿಡಿಸಿದ ಮೇಲೆ ಅವರಾಗೇ ಕನ್ನಡದ ಆರಾಧಕರಾಗುತ್ತಾರೆ.
ಒಂದು ವಿಸ್ಮಯ: ರಾಮನಗರಕ್ಕೆ ಹೋಗುವ ದಾರಿಯಲ್ಲಿ ಒಬ್ಬ ಹಳ್ಳಿಯವನಂತೆ ಕಾಣುವ ವ್ಯಾಪಾರಿ ಹೂ ಮಾರಾಟ ಮಾಡುತ್ತಿದ್ದ. ಯಾವುದೋ ಕುಗ್ರಾಮದ ವಿಳಾಸ ಕೇಳಿದೆ. ನಮಗೆ ಅದರ ದಾರಿಯನ್ನು ಹೇಳುವಾಗ “ರೈಟ್ ತಗೋಳಿ,.. ಲೆಫ್ಟ್ ತಗೋಳಿ” ಅಂತೆಲ್ಲಾ ಹೇಳಿದ. ನಾನು “ಎಲ್ಲಿ ಬಲಕ್ಕೆ ತಿರುಗಬೇಕು?” ಎಂದೆ. ಆತ “ಬಲಕ್ಕೆ ಬೇಡ ಸ್ವಾಮಿ, ರೈಟ್ ಗೆ ತಿರುಕ್ಕೋಳ್ಳಿ” ಎಂದ. ನನ್ನ ಬಾಯಿ ತೆರೆದೇ ಇತ್ತು. ಆತ ಮುಂದುವರೆದು “ನಿಮಗೆ ಡೌಟ್ ಬಂದರೆ ನಂಗೆ ಕಾಲ್” ಕೊಡಿ ಎಂದು, ತನ್ನ ಮೊಬೈಲ್ ನಂಬರನ್ನು “ಡಬಲ್ ಏಯ್ಟ್, ಟ್ರಿಪಲ್ ತ್ರೀ..  “ ಎಂದು ಹೇಳಿದ. ನನಗೆ ಜ್ಞಾನೋದಯವಾಯ್ತು. ನಮ್ಮ ದಿನನಿತ್ಯದ ಜೀವನದಲ್ಲೂ ನಮ್ಮ ಫೋನ್ ನಂಬರನ್ನು “ಎಂಟು, ಎಂಟು...” ಎಂದು ಕನ್ನಡದಲ್ಲಿ ಹೇಳಲು ಮರೆಯುತ್ತಿದ್ದೇವೆ. ಮೆಟ್ರೋ ಕ್ಯಾಷ್ ಅಂಡ್ ಕ್ಯಾರಿ, ಬಿಗ್ ಬಜಾರ್ ನಂತಹ ಸೂಪರ್ ಮಾರ್ಕೆಟ್ ಗಳಲ್ಲಿ, ಅಲ್ಲಿನ ನೌಕರರನ್ನು ಕೌಂಟರ್ ಗೆ ಕರೆಯಲು ಮೈಕ್ ಮೂಲಕ ಇಂಗ್ಲೀಷಿನಲ್ಲೇ ಉದ್ಘೋಷಣೆ ಮಾಡುತ್ತಾರೆ. ಆ ನೌಕರರೆಲ್ಲರೂ ಕನ್ನಡಿಗರೇ ಆಗಿದ್ದರೂ, ಮತ್ತು ಕನ್ನಡ ಚೆನ್ನಾಗೇ ಮಾತನಾಡಬಲ್ಲವರಾಗಿದ್ದರೂ, ಇಂಗ್ಲೀಷ್ ಘೋಷಣೆ ಅನಿವಾರ್ಯ ಎಂಬಂತೆ ಬಳಕೆಗೆ ತಂದಿದ್ದಾರೆ. ಬಹುತೇಕ ಸಂಧರ್ಭಗಳಲ್ಲಿ ಆ ನೌಕರರ ಹೆಸರು ಬಿಟ್ಟರೆ ಅವರಿಗೆ ಆ ಉದ್ಘೋಷಣೆಗಳಲ್ಲಿ ಬೇರೇನೂ ಅರ್ಥವಾಗುವುದಿಲ್ಲ. ಇಂತಹ ಒಂದು ಪ್ರಕರಣದಲ್ಲಿ, ಕಸ ಗುಡಿಸುವ ಸಿಬ್ಬಂದಿಯೊಬ್ಬರನ್ನು ಹೀಗೇ ಇಂಗ್ಲೀಷಿನಲ್ಲಿ ಮೈಕ್ ನಲ್ಲಿ ಕರೆದಾಗ, ಆಕೆ ಏನೂ ತಿಳಿಯದೇ, ಕೊನೆಗೆ ಆಕೆಯ ಸೂಪರ್ ವೈಸರ್ ಆಕೆಗೆ ತಿಳಿಸಿಹೇಳಿ ಕಳುಹಿಸಿದ್ದನ್ನು ನಾನು ಕಂಡಿದ್ದೇನೆ. ಈ ಸೂಪರ್ ಮಾಲ್ ನವರಿಗೆ ಯಾಕೆ ಇಂತಹ ಇಂಗ್ಲೀಷ್ ಮೋಹ ಎಂದು ಆಶ್ಚರ್ಯ ಪಟ್ಟಿದ್ದೇನೆ.
ಹೆಚ್ಚಿನ ಆಶಯಗಳನ್ನೂ, ಭಾರೀ ಬದಲಾವಣೆಗಳನ್ನೂ ನಿರೀಕ್ಷಿಸದೇ, ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ, ನಾವು ಕೆಲಸ ಮಾಡುವ ಸ್ಥಳಗಳಲ್ಲಿ, ವ್ಯಾಪಾರ ಮಾಡುವ ಜಾಗಗಳಲ್ಲಿ, ಕನ್ನಡಕ್ಕೆ ಪೂರಕವಾದ ವಾತವರಣವನ್ನು ಉಂಟು ಮಾಡುವುದೇ ಕನ್ನಡಕ್ಕೆ ಪ್ರೋತ್ಸಾಹ ಕೊಟ್ಟಂತೆ ಎಂಬುದು ಈ ಲೇಖನದ ಆಶಯ.

ಡಾ. ಎಸ್.ಎನ್. ಶ್ರೀಧರ
ಪ್ರಾಂಶುಪಾಲರು ಮತ್ತು ನಿರ್ದೇಶಕರು,
ಕೆ.ಎಸ್. ಸ್ಕೂಲ್ ಆಫ಼ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ ಮೆಂಟ್

ಕನಕಪುರ ರಸ್ತೆ, ಬೆಂಗಳೂರು.